
ಆಕರ್ಷಕ ರೂಪಿನ ಸಣ್ಣ ಆಳ್ತನದ ಮಹಾಬಲ ಹೆಗಡೆ ನಮ್ಮ ಭಾಗದಲ್ಲಿ ಯಕ್ಷಗಾನವಾದಾಗ ನಮ್ಮ ಮನೆಗೆ ಬರುತ್ತಿದ್ದರು. ಆಗ ನಾನಿನ್ನು ಚಿಕ್ಕವ. ಬೆಳಿಗ್ಗೆ ಮನೆಗೆ ಬಂದವರು ದಿನಪತ್ರಿಕೆ ಹಿಡಿದು ಕುಳಿತರೆ ಮಧ್ಯಾಹ್ನ ಊಟ ಸಮಯದವರೆಗೂ ಪತ್ರಿಕೆ ಓದುತ್ತ ಇರುತ್ತಿದ್ದರು. ಹಳ್ಳಿಯಾದ್ದರಿಂದ ಒಂದು ರಾಜ್ಯ ಮಟ್ಟದ ಪತ್ರಿಕೆ, ಮತ್ತೊಂದು ಸ್ಥಳೀಯ ಪತ್ರಿಕೆ ಬರುತ್ತಿತ್ತು. ಅದರಲ್ಲಿರುವ ಪ್ರತಿಯೊಂದು ಅಕ್ಷರವನ್ನೂ ಬಿಡದೆ ಓದುತ್ತಿದ್ದರು. ನನಗೆ ಆಶ್ಚರ್ಯ, ಇಷ್ಟೆಲ್ಲಾ ಯಾಕೆ ಓದುತ್ತಾರೆ ಎಂದು. ನಂತರ ಗೊತ್ತಾಯಿತು, ಅಂದು ಅವರು ಮಾಡುವ ಪಾತ್ರದ ಅರ್ಥ ಹೇಳುವಾಗ ಪತ್ರಿಕೆಯಲ್ಲಿ ಬಂದ ವಿಚಾರ ಪ್ರಸ್ತಾಪಿಸುತ್ತಿದ್ದರು.
ಮಹಾಬಲ ಹೆಗಡೆ ಅವರ ಪಾತ್ರಚಿತ್ರಣವೇ ಹಾಗೆ ಪೌರಾಣಿಕ ಪಾತ್ರಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಿ ಜನರೆದುರಿಗೆ ಇಡುತ್ತಿದ್ದರು. ಯಕ್ಷಗಾನದ ಪಾತ್ರಗಳಲ್ಲಿ ಅವರದ್ದು ರಾಜಿ ಇರಲಿಲ್ಲ. ಒಬ್ಬ ಕಲಾವಿದ ಬೆಳೆಯುತ್ತಾರೆ ಎಂದರೆ ಅವರನ್ನು ಬೆಳೆಸಲು ತಮ್ಮ ವಿದ್ಯೆಯನ್ನೆಲ್ಲಾ ನೀಡುವ ಸ್ವಭಾವದವರು. ಕಲಾವಿದ ಯಾರೇ ಆಗಲಿ ರಂಗದಲ್ಲಿ ತಪ್ಪು ಮಾಡಿದರೆ ಸಹಿಸುತ್ತಿರಲಿಲ್ಲ. ಅಲ್ಲಿಯೇ ಹೇಳುತ್ತಿದ್ದರು. ಬಣ್ಣದ ಮನೆಯಲ್ಲಿ ಮಹಾಬಲ ಹೆಗಡೆ ಅವರು ಇದ್ದರೆ ಅಲ್ಲೊಂದು ಶಿಸ್ತು ಇರುತ್ತಿತ್ತು. ಅವರೆದುರು ನಿಂತು ಮಾತನಾಡುವ ಧೈರ್ಯ ಬಹುತೇಕ ಕಲಾವಿದರಿಗೆ ಇರಲಿಲ್ಲ.
ಇಂತಹ ಮಹಾಬಲ ಹೆಗಡೆ ಅವರು ಯಕ್ಷಗಾನದ ಅನೇಕ ಪಾತ್ರಗಳು ಹೀಗೆ ಎನ್ನುವ ಸಿದ್ಧಾಂತ ನೀಡಿದ ಕಲಾವಿದ. ಇವರು ನಿರ್ವಹಿಸಿದ ಕೃಷ್ಣಸಂಧಾನದ ಕೌರವ. ರೇಣುಕಾಮಹಾತ್ಮೆಯ ಜಮದಗ್ನಿ, ವಿಶ್ವಾಮಿತ್ರ ಮೇನಕೆಯ ವಿಶ್ವಾಮಿತ್ರ, ಸುಧನ್ವಾರ್ಜುನದ ಅರ್ಜುನ, ಗದಾಯುದ್ಧದ ಅಶ್ವತ್ಥಾಮ

ಹಿಂದೂಸ್ತಾನಿ ಸಂಗೀತ ಬಲ್ಲ ಇವರು ಸ್ವತಃ ಭಾಗವತಿಕೆ ಮಾಡುತ್ತಿದ್ದರು. ಇವರ ಭಾಗವತಿಕೆಯಲ್ಲಿ ಯಕ್ಷಗಾನದ ಸಂಪ್ರದಾಯ ಕೆಡದಂತೆ ಸಂಗೀತವನ್ನು ಬಳಸುತ್ತಿದ್ದರು. ಹಾಗೇಯೆ ಪಾತ್ರ ನಿರ್ವಹಿಸುವಾಗ ತಮ್ಮ ಪಾತ್ರದ ಪದ್ಯಗಳನ್ನು ಎತ್ತುಗಡೆ ಮಾಡಿಕೊಳ್ಳುತ್ತಿದ್ದರು. ಇದು ಇವರ ಪಾತ್ರ ಮತ್ತಷ್ಟು ಉಠಾವ್ ಆಗಲು ಕಾರಣವಾಗಿತ್ತು. ಕೆರೆಮನೆ ಶಿವರಾಮ ಹೆಗಡೆ ಅವರ ಗರಡಿಯಲ್ಲಿ ಮೊದಲು ಪಳಗಿದ ಇವರು ತಮ್ಮದೇ ಶೈಲಿ ಹುಟ್ಟು ಹಾಕಿದ ಅಪರೂಪದ ಕಲಾವಿದ. ಶಿವರಾಮ ಕಾರಂತರ ಯಕ್ಷಗಾನ ಬ್ಯಾಲೆಯಲ್ಲಿ ಭಾಗವಹಿಸಿದ್ದರು. ಕಾರಂತರೊಂದಿಗೆ ಯಕ್ಷಗಾನದ ಸೂಕ್ಷ್ಮ ವಿಚಾರಗಳನ್ನು ಚರ್ಚಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದ್ದರು.
ಮಹಾಬಲ ಹೆಗಡೆ ಅವರು ಹಲವಾರು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಶೇಣಿ ಗೋಪಾಲಕೃಷ್ಣ ಭಟ್,

ಮಹಾಬಲ ಹೆಗಡೆ ಅವರು ತಮ್ಮ ವಿದ್ಯೆಯನ್ನು ತಮ್ಮ ಕಾಲಕ್ಕೆ ಸಿಮೀತ ಗೊಳಿಸದೆ ಹಲವಾರು ಶಿಷ್ಯರನ್ನು ಹುಟ್ಟುಹಾಕಿದರು. ಇಂದಿನ ಹೆಸರಾಂತ ಕಲಾವಿದರಾದ ಬಳ್ಕೂರು ಕೃಷ್ಣಯಾಜಿ, ಕಣ್ಣಿ ಗಣಪತಿ ಭಟ್ಟ, ಹಡಿನಬಾಳು ಶ್ರೀಪಾದ ಹೆಗಡೆ ಮಹಾಬಲ ಹೆಗಡೆ

ಯಕ್ಷಗಾನದ ಅನುರೂಪದ ಕಲಾವಿದರಾದ ಮಹಾಬಲ ಹೆಗಡೆ ಅವರು ಕಳೆದ ಏಳುವರ್ಷಗಳಿಂದ ರಂಗದಿಂದ ಹಿಂದೆ ಸರಿದಿದ್ದರು. ತಮ್ಮ ಒಬ್ಬ ಮಗನ ಅಕಾಲ ಮರಣದಿಂದ ನೊಂದಿದ್ದರು. ಆದರೂ ಎರಡು ವರ್ಷದ ಹಿಂದೆ ಅಭಿಮಾನಿಗಳ ಒತ್ತಾಯದಿಂದ ಭೀಷ್ಮಪರ್ವ, ಪಟ್ಟಾಭಿಷೇಕ ಎಂಬ ಪ್ರಸಂಗದ ವಿಡೀಯೋ ಅವತರಿಣಿಕೆಯಲ್ಲಿ ಭಾಗವಹಿಸಿದ್ದರು. ಇಂತಹ ಶ್ರೇಷ್ಠ ಕಲಾವಿದ ನಮ್ಮನ್ನು ಅಗಲಿದ್ದಾರೆ. ಅವರಿಗೆ ಇದು ನುಡಿನಮನ.
ನಾಗರಾಜ ಮತ್ತಿಗಾರ