Tuesday, June 23, 2009

`ವಿಶೇಷ ಸಮರಂಗ`




ಹೊಸ ಪ್ರಸಂಗಗಳ ಅಬ್ಬರದಲ್ಲಿ ಪೌರಾಣಿಕ ಪ್ರಸಂಗಗಳು ಹೊಸ ವೀಕ್ಷಕರನ್ನು ಕಳೆದುಕೊಳ್ಳುತ್ತಿವೆ. ಹಾಗೆಂದು ಪೌರಾಣಿಕ ಪ್ರದರ್ಶನಗಳು ಕಡಿಮೆಯಾಗಿವೆ ಎಂದರ್ಥವಲ್ಲ. ಬೆಂಗಳೂರಿನಲ್ಲಿ ಸಾಕಷ್ಟು ಪೌರಾಣಿಕ ಪ್ರಸಂಗಳು ಪ್ರದರ್ಶನಗೊಳ್ಳುತ್ತಿವೆ. ಇದೊಂದು ಆರೋಗ್ಯಕರ ಬೆಳವಣಿಗೆ. ಪೌರಾಣಿಕ ಕಥಾನಕಗಳಲ್ಲೂ ಹೊಸತನ ಕಾಣಬಹುದು. ಹೆಚ್ಚಿನ ಪ್ರಯೋಗಗಳ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶನ ಕಂಡ `ವಿಷಮ ಸಮರಂಗ' ಪ್ರಸಂಗ.
ಇದು ಕೃಷ್ಣನ ಜನ್ಮದಿಂದ ನಿರ್ಯಾಣದವರೆಗಿನ ಕಥಾನಕಗಳ ಗುಚ್ಛ. ಕೃಷ್ಣನ ಲೀಲೆ, ಕಂಸವಧೆ, ಪಾಂಚಜನ್ಯ ಮೋಕ್ಷ, ಬಲರಾಮ ರೇವತಿ ವಿವಾಹ, ಶ್ರೀಕೃಷ್ಣ ಪರಂಧಾಮದವರೆಗಿನ ಕತೆಗಳ ಸಂಯೋಜನೆ ಈ `ವಿಷಮ ಸಮರಂಗ'.
ಪ್ರಸಂಗದ `ಕಂಸವಧೆ' ಆಖ್ಯಾನದಲ್ಲಿ ಕಂಸನಾಗಿ ಹುಡುಗೋಡು ಚಂದ್ರಹಾಸ, ಕೃಷ್ಣನಾಗಿ ಕಣ್ಣಿಮನೆ ಗಣಪತಿ ಭಟ್ಟ ಮತ್ತು ಬಲರಾಮನಾಗಿ ನರಸಿಂಹ ಗಾಂವಕರ್‌ ಕಾಣಿಸಿಕೊಂಡಿದ್ದರು. ಕಣ್ಣಿಮನೆ ತಮ್ಮ ಕುಣಿತಕ್ಕೆ ಇನ್ನಷ್ಟು ಹೊಸತನ್ನು ಕೊಟ್ಟರು. `ಮರೆತು ನಿಲುವುದೇಕೆ ಮಾವ ಅಳಿಯನಲ್ಲವೇ' ಎನ್ನುವ ಪದ್ಯಕ್ಕೆ ಅವರ ಅಭಿನಯ ಅದ್ಭುತ. ಕುಣಿತದಲ್ಲಿ ಅವರದು ಬಹುಬಗೆ. ಕೆಲವು ಕಡೆ ಕುಣಿತ ಹೆಚ್ಚೆನಿಸಿದರೂ ಪುಂಡ ಕೃಷ್ಣನಿಗೆ ಅದು ಓಕೆ. ಆದರೆ ಬಲರಾಮನ ಪಾತ್ರದಾರಿ ಗಾಂವಕರ್‌ ಅವರ ಕುಣಿತ ಸ್ವಲ್ಪ ಹೆಚ್ಚಾಯಿತು ಎಂದು ಅನಿಸಿದರೆ ತಪ್ಪಲ್ಲ. ಅಕ್ರೂರನಾಗಿ ಆಲ್ಮನೆ ಪದ್ಮನಾಭ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. `ಉರಿಯುವುದೊಂದೆ ದೀಪವು ಎರಡಾಗುತ್ತಿದೆ' ಮತ್ತು `ನೆತ್ತಿಗೆ ತೈಲವ ಒತ್ತುತ' ಪದ್ಯಕ್ಕೆ ಪ್ರೇಕ್ಷಕರ ನಿರೀಕ್ಷೆಯ ಅಭಿನಯ ನೀಡುವಲ್ಲಿ ಕಂಸ ಸಫಲನಾಗಲಿಲ್ಲ. ಆದರೆ ಉಳಿದ ಭಾಗದಲ್ಲಿ ತಮ್ಮ ಸಾಮರ್ಥ್ಯಕ್ಕೆ ಮೀರಿ ನೃತ್ಯ, ಅಭಿನಯ, ಸಂಭಾಷಣೆಯಲ್ಲಿ ಯಶಸ್ವಿಯಾಗಿದ್ದಾರೆ.
ಹಳ್ಳಾಡಿ ಜಯರಾಂ ಶೆಟ್ಟರ `ರಜಕ' ನಿಜಕ್ಕೂ ರಂಜಕನಾಗಿದ್ದ. ಎಲ್ಲಿಯೂ ಯಕ್ಷಗಾನ ಚೌಕಟ್ಟನ್ನು ಮೀರದ ಶ್ರೇಷ್ಠ ಹಾಸ್ಯ, ಅನುಭವದ ಅಭಿನಯ ಅವರದಾಗಿತ್ತು.
ಪ್ರಸಂಗದ ಎರಡನೇ ಭಾಗವಾದ `ಪಾಂಚಜನ್ಯ ಮೋಕ್ಷ'ದಲ್ಲಿ ಕೃಷ್ಣನ ಗುರುವಾದ ಸಾಂದೀಪ ಋಷಿ ಕತೆ ಬರುತ್ತದೆ. ಇದರಲ್ಲಿ ಕೃಷ್ಣನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಇಷ್ಟವಾದರು. ಕೃಷ್ಣ ಮತ್ತು ಪಾಂಚಜನ್ಯ ರಾಕ್ಷಸನ ನಡುವಿನ ಸಂಭಾಷಣೆ ಭಾಗ ಅಪರೂಪವಾಗಿತ್ತು. ಮತ್ಯುಕನ್ನೆಯ ಮಗಳಾದ `ಅತಿಕೆ'ಯಾಗಿ ಶಿವಕುಮಾರ್‌ ಬೇಗಾರ್‌ ಅವರ ನಿರ್ವಹಣೆ ಉತ್ತಮ.`ಸ್ತ್ರೀಯರು ಯುದ್ಧಕ್ಕೆ ಯೋಗ್ಯರಲ್ಲ ಮನೆ ಕೆಲಸ ಮಾತ್ರಕ್ಕೆ ಯೋಗ್ಯ' ಎಂದು ಅಪಹಾಸ್ಯ ಮಾಡುವ `ತರುಣಿಯರ ಅಗ್ಗಳಿಕೆ' ಎನ್ನುವ ಪದ್ಯಕ್ಕೆ ಕೊಂಡದಕುಳಿ ಅವರು ಶ್ರೇಷ್ಠ ಅಭಿನಯ ನೀಡಿದರು.
ಪ್ರಸಂಗದ ಮೂರನೇ ಭಾಗವಾಗಿ `ಬಲರಾಮ ವಿವಾಹ' ಮತ್ತು `ಶ್ರೀಕೃಷ್ಣ ಪರಂಧಾಮ' ಕಥಾನಕದಲ್ಲಿ ಬಲರಾಮನಾಗಿ ಬಳ್ಕೂರು ಕೃಷ್ಣಯಾಜಿ ರಂಗದಲ್ಲಿ ಮಿಂಚಿನ ಸಂಚಲನ ಮೂಡಿಸುವಲ್ಲಿ ಸಫಲರಾದರು. ರೇವತಿ ಮತ್ತು ಬಲರಾಮ ಸಂಭಾಷಣೆ ರಂಜನೀಯವಾಗಿತ್ತು. ಬೆಳಗಿನ ಜಾವಕ್ಕೆ ಈ ಭಾಗ ಬಂದಿದ್ದರಿಂದ ನಿದ್ದೆಯ ಮಂಪರಿನಿಂದ ಪ್ರೇಕ್ಷಕರು ಸಂಪೂರ್ಣ ಎಚ್ಚರಗೊಳ್ಳುವಂತಾಯಿತು.
ಸ್ತ್ರೀ ಪಾತ್ರದಲ್ಲಿ ಹೆಚ್ಚಿನ ಅನುಭವವಿರುವ ಶಶಿಕಾಂತ ಶೆಟ್ಟಿ ಅವರು ಅಂದು ಶ್ರೀಕೃಷ್ಣನ ಪಾತ್ರ ನಿರ್ವಹಿಸಿದರು. ಪರಂಧಾಮ ಗೈಯುವ ಭಾಗದ ಸಂಭಾಷಣೆ ಭಾವನಾತ್ಮಕವಾಗಿತ್ತು.
ಭಾಗವತರಾಗಿ ರವಿ ಸುರಾಲ್‌, ರಾಘವೇಂದ್ರ ಮಯ್ಯ ಮತ್ತು ಹೆರಂಜಾಲು ಗೋಪಾಲ ಗಾಣಿಗ ಅವರು ಉತ್ತಮವಾಗಿ ಹಾಗೂ ಸಾಹಿತ್ಯ ಸ್ಪಷ್ಟವಾಗಿ ಹಾಡಿದರು. ಹಿಮ್ಮೇಳ ಕಲಾವಿದರಿಗೆ ಪೂರಕವಾಗಿತ್ತು. ಶಿವಾನಂದ ಕೋಟ ಅವರು ನಾಲ್ಕು ಚೆಂಡೆಯನ್ನು ಏಕಕಾಲಕ್ಕೆ ನುಡಿಸಿ ರಂಜಿಸಿದರು.
ಅವಿಭಜಿತ ದಕ್ಷಿಣ ಕನ್ನಡ ವಕೀಲರ ಸಂಘದವರು ಈ ಯಕ್ಷಗಾವನ್ನು ಆಯೋಜಿಸಿದ್ದರು. ಇಂತಹ ಅಪರೂಪದ ಪೌರಾಣಿಕ ಪ್ರಸಂಗ ಯಕ್ಷಪ್ರಿಯರಿಗೆ ನೀಡಿದ ವಕೀಲರ ಸಂಘದವರು ಅಭಿನಂದನಾರ್ಹರು.

Friday, June 19, 2009

ಚಂಡೆಗೂ ತಾರಾ ಮೌಲ್ಯ ನೀಡಿದ ಕಲಾವಿದ


ಚಂಡೆಗೂ ತಾರಾ ಮೌಲ್ಯ ನೀಡಿದ ಕಲಾವಿದ ಕೆಸರಕೊಪ್ಪದ ವಿಘ್ನೇಶ್ವರ ಗೌಡ ಅವರಿಗೆ ಇತ್ತೀಚೆಗೆ ಹಾರ್ಸಿಕಟ್ಟಾದಲ್ಲಿ ಯಕ್ಷಗಾನ ಕಲಾವಿದ ಡಿ.ಜಿ.ಹೆಗಡೆ ಮತ್ತಿಗಾರ ನೆನಪಿನ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ನಿಮಿತ್ತ ಎಲೆಮರೆಯ ಕಾಯಿಯಾಗಿಯೇ ಇದ್ದ ಚಂಡೆ ವಾದಕರ ಪರಿಚಯ ಮಾಡುವ ಬರಹ ಇದು.
ಇಂದಿಗೂ ಬಹುಪಾಲು ಜನರಿಗೆ ಯಕ್ಷಗಾನ ಎಂದಾಕ್ಷಣ ನೆನಪಾಗುವದು ಚಂಡೆ. ಚಂಡೆಯ ಸದ್ದು ಕೇಳಿದೊಡನೇ ಯಕ್ಷಗಾನ ನೋಡಿ ಬರೋಣ ಎನಿಸುತ್ತದೆ. ಇಂಥ ಮಾದಕ ಆಕರ್ಷಣೆಯ ಚಂಡೆಯ ವಾದಕ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಷ್ಟೇ ಅಲ್ಲ, ಅದರಾಚೆ ಕೂಡ ಪ್ರಸಿದ್ಧಿ ಪಡೆದು ಮನೆ ಮಾತಾದವರು ವಿಘ್ನೇಶ್ವರ ಗೌಡ ಕೆಸರಕೊಪ್ಪ. ಓದಿದ್ದು ನಾಲ್ಕನೇ ಈಯತ್ತೆಯಾದರೂ ಚಂಡೆ ವಾದನದ ಗುಂಗಿನಲ್ಲಿ ಚಂಡೆ ಕಲಿತು ಇಂದು ಚಂಡೆ ವಾದನದಲ್ಲಿ ಹೆಸರುಗಳಿಸಿಕೊಂಡಿದ್ದಾರೆ, ಗಳಿಸಿದ ಹೆಸರನ್ನು ಉಳಿಸಿಕೊಂಡಿದ್ದಾರೆ. ಮೂಲತಃ ಶಿರಸಿ ತಾಲೂಕಿನ ಕಾನಗೋಡ ಸಮೀಪದ ಕೆರಸಕೊಪ್ಪದ ಊರಿನ ವಿಘ್ನೇಶ್ವರ ಬದುಕಿಗೆ ವಾಹನವನ್ನು ಬಾಡಿಗೆಗೆ ಓಡಿಸುತ್ತಾರೆ. ಅದರ ಮಧ್ಯೆ, ಕೆಲವೊಮ್ಮೆ ಬಂದ ಬಾಡಿಗೆಯನ್ನೂ ಬಿಟ್ಟು ಯಕ್ಷಗಾನಕ್ಕೆ ಹೋಗುತ್ತಾರೆ. ಇಂಥ ಅಪ್ಪಟ ಕಲಾ ಸೇವಕ ದ್ಯಾವ ಗೌಡ ಮತ್ತು ನಾಗವೇಣಿ ಅವರ ನಾಲ್ಕನೇ ಮಗ. ನಾಲ್ಕನೇ ತರಗತಿಗೆ ಗೋಲಿ ಹೊಡೆದು ಶಂಕರ ಭಾಗವತ ಗಿರಿಗಡ್ಡೆ ಅವರ ಮಾರ್ಗದರ್ಶನದಲ್ಲಿ ಶಂಕರ ಭಾಗವತ ಯಲ್ಲಾಪುರ ಅವರಲ್ಲಿ ಚಂಡೆ ವಾದನದ ಗತ್ತನ್ನು ಕಲಿತರು. ಪ್ರಾರಂಭದಲ್ಲಿ ಬಾಲ ವೇಷಗಳ್ನೂ ಹಾಕಿದ ವಿಘ್ನೇಶ್ವರ ಗೌಡ, ತಮ್ಮ ಇಪ್ಪತ್ತನೇ ವರ್ಷದಿಂದಲೇ ಚಂಡೆಯ ಮೂಲಕ ಯಕ್ಷಗಾನ ಕಲಾವಿದರನ್ನು ಕುಣಿಸಲು ಪ್ರಾರಂಭಿಸಿದರು. ಪಂಚಲಿಂಗೇಶ್ವರ, ವೀರಾಂಜನೇಯ ಹಾಗೂ ಕೆರೆಮನೆ ಮೇಳ ಸೇರಿದಂತೆ ವಿವಿಧ ಮೇಳಗಳಲ್ಲಿ ಕೂಡ ಹಿಮ್ಮೇಳದಲ್ಲಿ ಚಂಡೆ ವಾದನ ಮಾಡಿದ ಗೌಡ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಗಣಪತಿ ಭಟ್ಟ, ಗಣಪತಿ ಹೆಗಡೆ ಸೇರಿದಂತೆ ಪ್ರಮುಖ ಕಲಾವಿದರೂ ಇವರ ಚಂಡೆಗೆ ಹೆಜ್ಜೆ ಹಾಕಿದ್ದಾರೆ. ನೆಬ್ಬೂರು ನಾರಾಯಣ ಭಾಗವತ್‌, ಕೇಶವ ಹೆಗಡೆ, ಸುಬ್ರಹ್ಮಣ ಧಾರೇಶ್ವರ ಸೇರಿದಂತೆ ಪ್ರಮುಖ ಭಾಗವತರ ಹಾಡುಗಾರಿಕೆಗೂ ಸಾತ್‌ ನೀಡಿದ್ದಾರೆ. ಈಗಗಾಲೇ ಐದು ಸಾವಿರಕ್ಕೂ ಅಧಿಕ ಯಕ್ಷಗಾನಗಳಲ್ಲಿ ಚಂಡೆ ವಾದನ ಮಾಡಿದ್ದಾರೆ ಇವರು. ಇವರ ಚಂಡೆಯಲ್ಲಿ ಲಯ ಬದ್ಧತೆ, ಸ್ಪಷ್ಟತೆ, ವೇಗ ಇರುವ ಕಾರಣ ವಿಘ್ನೇಶ್ವರ ಗೌಡ ಅವರ ಚಂಡೆ ಎಂದರೆ ಯಕ್ಷಗಾನ ನೋಡಲು ಬರುವ ಪ್ಷೇಕ್ಷಕರ ಸಂಖ್ಯೆ ಕೂಡ ವೃದ್ಧಿಸುತ್ತಿದೆ. ಬೆಂಗಳೂರು, ಮಂಗಳೂರು, ಉಡುಪಿ, ದೆಹಲಿ, ಬಾಂಬೆ ಸೇರಿದಂತೆ ವಿವಿಧಡೆ ತಮ್ಮ ಕಲಾ ಸೇವೆ ನೀಡಿರುವ ಇವರನ್ನು ಮಂಗಳವಾರ ಜೂ.16ರ ಸಂಜೆ ಹಾರ್ಸಿಕಟ್ಟಾದ ದಿವಾನ್‌ ಯಕ್ಷ ಸಮೂಹ ಗೌರವಿಸಲಿದೆ. ಸಾರ್ಥಕ ಸೇವೆಗೆ ಸಂದ ಗೌರವ ಇದಾಗಿದೆ. ಎಲೆಮರೆಯಾಗಿಯೇ ಇದ್ದ ಗೌಡರನ್ನು ಗೌರವಿಸುವ ಮೂಲಕ ಯಕ್ಷ ಸಮೂಹ ಕೂಡ ತನ್ನ ಗೌರವವನ್ನು ಇಮ್ಮಡಿಗೊಳಿಸಿಕೊಂಡಿದೆ.
ರಾಘವೇಂದ್ರ ಬೆಟ್ಟಕೊಪ್ಪ
( udayavani dina patrike krape)

Tuesday, June 2, 2009

ಶಾಲೆಯಲ್ಲಿ ಯಕ್ಷಗಾನವೂ ಪಠ್ಯವಾಗಬೇಕು


ಹೆಸರು: ಹೊಸ್ತೋಟ ಮಂಜುನಾಥ ಭಾಗವತ
ಪ್ರಸಿದ್ಧ ಯಕ್ಷಋಷಿ, ಗುರು, ಪ್ರಸಂಗಕರ್ತ
ಜನ್ಮ ದಿನಾಂಕ: 15-2- 1940
ತಂದೆ, ತಾಯಿ: ಗಣಪತಿ ಭಟ್ಟ, ಮಹಾದೇವಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹತ್ತಿರದ ಹನುಮಂತಿ ಗ್ರಾಮದ ಹೊಸ್ತೋಟ ಎನ್ನುವ ಸಣ್ಣ ಹಳ್ಳಿಯಲ್ಲಿ ಜನಿಸಿದವನು ನಾನು. ಬಡ ಕುಟುಂಬ ನಮ್ಮದು. ನನ್ನ ಅಪ್ಪನಿಗೆ ನಾವು ಐದು ಮಂದಿ ಮಕ್ಕಳು. ನಾನು ಗಂಡು ಮಕ್ಕಳಲ್ಲಿ ಹಿರಿಯವ.
ನಮ್ಮ ಕುಟುಂಬಕ್ಕೂ ಯಕ್ಷಗಾನಕ್ಕೂ ಸಂಬಂಧ ಯಾವಾಗಲೂ ಇದೆ. ನಮ್ಮ ಮನೆಗೆ ಕಲಾವಿದರು ಬರುವುದು, ಹೋಗುವುದು ರೂಢಿಯಲ್ಲಿತ್ತು. ಹಾಗಾಗಿ ನಾನು ಸಣ್ಣವನಿರುವಾಗಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು. ಆವಾಗಲಿಂದಲೂ ನಾನು ಕೆರೆಮನೆ ಶಿವರಾಮ ಹೆಗಡೆ ಅವರ ಅಭಿಮಾನಿ. ಯಕ್ಷಗಾನದ ಚಟವನ್ನು ಅಂಟಿಸಿಕೊಂಡ ನಾನು ಶಾಲೆ ಕಲಿತದ್ದು ನಾಲ್ಕನೇ ತರಗತಿಯವರೆಗೆ ಮಾತ್ರ. ನನ್ನ ಮೂವತ್ತನೇ ವರ್ಷದವರೆಗೂ ನಾನು ಹೀಗೆ ಆಗಬೇಕು, ಇದನ್ನೇ ಮಾಡಬೇಕು ಎಂದು ಕನಸು ಕಂಡವನಲ್ಲ. ಒಬ್ಬ ೃಹ್ಮಚಾರಿಯಾಗಿಯೇ ಕಾಲನ ಜೊತೆ ಹೊಂದಿಕೊಳ್ಳುತ್ತೇನೆ ಎಂದು ಊಹಿಸಿಯೂ ಇರಲಿಲ್ಲ.
ಯಕ್ಷಗಾನವನ್ನು ಕಲಿತ ನಾನು ಮೇಳ ಗೀಳ ಸೇರದೆ ಮನೆಯಲ್ಲೇ ಕೆಲಸ ಮಾಡುತ್ತಾ ಇದ್ದೆ. ಮನೆಯಲ್ಲಿ ಮದುವೆಯಾಗು ಎನ್ನುವ ಒತ್ತಾಯವು ಪ್ರಾರಂಭವಾಯಿತು. ಸರಿ, ಮದುವೆಯಾಗೋಣ ಎಂದು ಮನಸ್ಸು ಮಾಡಿದರೆ ಬಂದ ಸಂಬಂಧವೆಲ್ಲ ಮನೆ ಅಳಿಯ ಆಗುವ ಸಂಬಂಧಗಳೇ. ಮೊದಲು ನಾನು ಸ್ವಂತ ಜಮೀನು ಮಾಡಿಕೊಳ್ಳಬೇಕು. ನಂತರ ಮದುವೆಯ ವಿಚಾರ ಎಂಬ ತಿರ್ಮಾನಕ್ಕೆ ಬಂದೆ.
ಬೇಡ್ತಿ ನದಿಯ ಪ್ರದೇಶದಲ್ಲಿ ಪಡಬಿದ್ದ ಜಮೀನನ್ನು ಸರಿ ಮಾಡಿ, ಅಡಿಕೆ ತೋಟ ಮಾಡಿದೆ. ಇನ್ನೇನು ಫಸಲು ಬರುತ್ತದೆ ಎನ್ನುವಾಗ, ಬೇಡ್ತಿ ನದಿಗೆ ಅಣೆಕಟ್ಟು ಕಟ್ಟುತ್ತಾರೆ ಎನ್ನುವ ಗುಲ್ಲು ಬಿತ್ತು. ನಾನು ಮಾಡಿದ ಶ್ರಮವೆಲ್ಲ ವ್ಯರ್ಥವಾಯಿತಲ್ಲ ಎನ್ನುವ ಬೇಸರದಿಂದ ಆ ಜಾಗವನ್ನೇ ಬಿಟ್ಟು ರಾಮಕೃಷ್ಣ ಆಶ್ರಮ ಸೇರಿ ಬಿಟ್ಟೆ. ಇದು ನನ್ನ ಜೀವನದ ಬದಲಾವಣೆಯ ಕಾಲ.
ಇಲ್ಲೊಂದು ಮಜಾ ಇದೆ. ನಾನು ಅಂದು ಮುಳುಗಡೆಯಾಗಬಹುದು ಎಂದು ಯಾವ ಜಮೀನನ್ನು ಬಿಟ್ಟು ಹೊರಟೆನೋ ಆ ಜಮೀನು ಇನ್ನೂ ಮುಳಗಡೆಯಾಗದಿರುವುದು ವಿಶೇಷ.
ಆಶ್ರಮ ಸೇರಿದ ನನಗೆ ಆಧ್ಯಾತ್ಮಿಕ ಒಲವು ಹೆಚ್ಚಾಯಿತು. ನಾನು ಸಣ್ಣವನಿರುವಾಗಿನಿಂದ ಗೀಳು ಹಚ್ಚಿಕೊಂಡಿದ್ದ ಯಕ್ಷಗಾನ ಮತ್ತೆ ಸೆಳೆಯಿತು. ಯಕ್ಷಗಾನವನ್ನೇ ನಾನು ಅಧ್ಯಾತ್ಮವಾಗಿ ತೆಗೆದುಕೊಂಡೆ. ಅದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಕಾಣತೊಡಗಿದೆ. ಮದುವೆ ಎನ್ನುವ ವಿಚಾರವೇ ನನಗೆ ನೆನಪಿಗೆ ಬರಲಿಲ್ಲ.
ನನ್ನ ಮೂವತ್ತನೇ ವಯಸ್ಸಿಗೆ ಆಶ್ರಮದಿಂದ ಮರಳಿದೆ. ಕೆರೆಮನೆ ಮೇಳದ ಸಂಪರ್ಕಕ್ಕೆ ಬಂದೆ. ಅಲ್ಲಿ ನನ್ನ ಇಷ್ಟದ ಕಲಾವಿದರಾದ ಶಿವರಾಮ ಹೆಗಡೆ ಅವರ ಸಖ್ಯ. ಅವರ ಹತ್ತಿರ ನಾನೊಂದು ದಿನ ಅಂದೆ `ನಿಮ್ಮ ಅಭಿಮಾನಿ, ನಿಮ್ಮ ಪಾತ್ರಗಳು ಖುಷಿಯಾಗುತ್ತದೆ' ಎಂದೆ. ಅದಕ್ಕೆ ಅವರು, `ತಮಾ, ಕಲಾವಿದನನ್ನು ಮೆಚ್ಚುವುದಕ್ಕಿಂತ, ಅವನನ್ನು ದೊಡ್ಡ ಮಾಡುವುದಕ್ಕಿಂತ ಕಲೆಯನ್ನು ಮೆಚ್ಚ ಬೇಕು. ಕಲಾವಿದನಿಗಿಂತ ಕಲೆ ದೊಡ್ಡದು' ಎಂದರು.
ನಾನು ಅಂದಿನಿಂದ ಯಕ್ಷಗಾನದ ಪ್ರತಿಯೊಂದು ಅಂಗವನ್ನು ಕಲಿಯುವ ಹಟ ತೊಟ್ಟೆ. ನನ್ನ ಜೀವನ ಎನಿದ್ದರೂ ಯಕ್ಷಗಾನ ಎನ್ನುವ ದೃಢ ನಿರ್ಧಾರಕ್ಕೆ ಬಂದೆ. ಯಕ್ಷಗಾನ ಕುಣಿತ ಕಲಿತೆ, ಕುಣಿದೆ. ನೃತ್ಯವನ್ನು ಕಲಿತವನಿಗೆ ಭಾಗವತಿಕೆ ಬಂದರೆ ಒಳ್ಳಯದಲ್ಲವೇ ಎಂದು ಅದನ್ನೂ ಕಲಿತೆ. ಇವೆರಡನ್ನೂ ಕಲಿತ ನನಗೆ ಮದ್ದಲೆ ಮತ್ತು ಚಂಡೆ ವಾದನವನ್ನು ಕಲಿತರೆ ಒಳ್ಳೆಯದು ಅನಿಸಿತು. ಕಲಿತೆ. ನಂತರ ಕೆರೆಮನೆ ಮೇಳದಲ್ಲಿ ಕಲಾವಿದನಾಗಿ ಪಾತ್ರಗಳನ್ನು ನಿರ್ವಹಿಸತೊಡಗಿದೆ.
ಕಲಾವಿದನಾಗಿದ್ದ ನನಗೆ ಯಕ್ಷಗಾನ ಕಲಿಯುವವರಿಗೆ ಏನಾದರೂ ಸುಲಭ ವಿಧಾನವನ್ನು ಅಳವಡಿಸಬೇಕು. ಅದು ಗಣಿತ ರೂಪದಲ್ಲಿರಬೇಕು. ಸುಲಭ ಮತ್ತು ಒಮ್ಮೆ ಕಲಿತರೆ ಮರೆಯದಂತಿರಬೇಕು ಎಂಬ ಸೂತ್ರ ಅಳವಡಿಸುವ ಕನಸನ್ನು ಕಂಡೆ. ಅದರ ಬಗ್ಗೆ ಅಧ್ಯಯನ ಮಾಡಿದೆ. ಬಾಳೆಹದ್ದ ಕೃಷ್ಣ ಭಾಗವತರು ಅದಕ್ಕೆ ಸಹಕಾರಿಯಾದರು. ಅಲ್ಲಿಂದ ನಾನು ನನ್ನ ಹತ್ತಿರ ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಗಣಿತ ಸೂತ್ರದಲ್ಲಿಯೇ ಯಕ್ಷಗಾನವನ್ನು ಹೇಳಿ ಕೊಡತೊಡಗಿದೆ. ಈ ಗಣಿತ ಸೂತ್ರದಲ್ಲಿ ಯಕ್ಷಗಾನವನ್ನು ಸರಿಯಾಗಿ ಕಲಿತರೆ ಮತ್ತೆ ಮರೆಯುವ ಸಂಭವವಿರುವುದಿಲ್ಲ ಎನ್ನುವುದು ಗಮನಕ್ಕೆ ಬಂತು. ಲಯ ತಪ್ಪುವ ಸಂಭವವೂ ಇಲ್ಲಿರುವುದಿಲ್ಲ. ಇಂದು ನನ್ನ ಅನೇಕ ಶಿಷ್ಯರು ಅದೇ ವಿಧಾನದಲ್ಲಿ ಯಕ್ಷಗಾನವನ್ನು ಕಲಿಸಿ ಕೊಡುತ್ತಿರುವುದರಿಂದ ಆ ಕನಸು ನನಸಾಗಿದೆ.
ಯಕ್ಷಗಾನವನ್ನು ಸಾಮನ್ಯರಿಗೆ ಕಲಿಸಿ ಬಿಡಬಹುದು. ಆದರೆ ಅಂಧರಿಗೆ ಕಲಿಸಿ ಅವರ ಹತ್ತಿರ ಒಂದು ಆಖ್ಯಾನವನ್ನು ಆಡಿಸಬೇಕು ಎನ್ನುವ ಕನಸನ್ನು ಕಂಡೆ. ಸರಿ ಶಿವಮೊಗ್ಗದಲ್ಲಿರುವ ಅಂಧರ ಶಾಲೆಗೆ ಹೋಗಿ ಅವರಿಗೆ ಯಕ್ಷಗಾನವನ್ನು ಕಲಿಸಿದೆ. ಅದೊಂದು ಸವಾಲು. ಆದರೆ ನಾನು ಅಂದುಕೊಂಡದ್ದಕ್ಕಿಂತ ಬೇಗನೆ ಅವರು ಯಕ್ಷಗಾನವನ್ನು ಕಲಿತರು. ಅವರು `ಕಂಸವಧೆ' ಯಕ್ಷಗಾನವನ್ನು ಹಲವಾರು ಬಾರಿ ಪ್ರದರ್ಶಿಸಿದರು.
ನಾನು ಸದಾ ಕನಸುಗಾರ ಎನ್ನಬಹುದು. ಆದರೆ ಕನಸು ನನಸಿನ ಗುರಿ ತಲುಪಬೇಕು, ಅಲ್ಲಿಯವರೆಗೆ ನನಗೆ ಸಮಾಧಾನವಿರುವುದಿಲ್ಲ. ಈ ಕನಸಿನ ಫಲವೇ ಇಂದು ನಾನು 160 ಯಕ್ಷಗಾನ ಆಖ್ಯಾನಗಳನ್ನು ರಚಿಸಲು ಕಾರಣವಾಯಿತು. ಇದರಲ್ಲಿ ಸಂಪೂರ್ಣ ರಾಮಾಯಣ, ಸಂಪೂರ್ಣ ಮಹಾಭಾರತ, ಸಂಪೂರ್ಣ ಭಾಗವತ, ಭಾಸವತಿ, ಶ್ರೀರಾಮ ನಿರ್ಯಾಣ ಜೊತೆಗೆ ಮಕ್ಕಳು ಸುಲಭವಾಗಿ ಪ್ರದರ್ಶನ ನೀಡುವಂತಹ ಹಲವಾರು ಯಕ್ಷಗಾನವನ್ನು ಬರೆದಿದ್ದೇನೆ.
ಇಂದು ವೃತ್ತಿ ಮೇಳಗಳು ಪ್ರದರ್ಶಿಸುವ ಯಕ್ಷಗಾನದಲ್ಲಾದ ಬದಲಾವಣೆ ನೋಡಿದರೆ ಭಯವಾಗುತ್ತದೆ. ಹೊಸ ಕಲಾವಿದರಿಗೆ ಪೌರಾಣಿಕ ಪ್ರಸಂಗದಲ್ಲಿ ಪಾತ್ರ ನಿರ್ವಹಿಸಿದರೆ, ಮಾತಾಡಲಿಕ್ಕೆ ಬರದೆ ಬೇಗನೆ ರಂಗದಿಂದ ನಿರ್ಗಮಿಸುವುದನ್ನು ಕಾಣಬಹುದು. ಅಧ್ಯಯನದ ಕೊರತೆ ಇಂದಿನ ಬಹುತೇಕ ಕಲಾವಿದರಿಗೆ ಇದೆ. ಒಂದು ತಿರುಗಾಟ ಮಾಡಿದಾಕ್ಷಣ ತಾನೊಬ್ಬ ಕಲಾವಿದ ಎಂದುಕೊಂಡು ಬಿಡುತ್ತಾನೆ. ಯಕ್ಷಗಾನದ ಮಟ್ಟಿಗೆ ಇದು ಒಳ್ಳೆಯ ಲಕ್ಷಣವಲ್ಲ. ಇದಕ್ಕೆ ಸಾಮಾಜಿಕ ಪ್ರಸಂಗವೇ ಕಾರಣವೇನೋ ಅನ್ನಿಸುತ್ತದೆ. ಹೊಸ ಪ್ರಸಂಗ ಎನ್ನುವುದು ಯಕ್ಷಗಾನಕ್ಕೆ ಹೊಸತಲ್ಲ. ಆದರೆ ಇಂದು ಬರುತ್ತಿರುವ ಹೊಸ ಪ್ರಸಂಗಗಳಿಗೂ ಅಂದು ಬಂದ ಪ್ರಸಂಗಕ್ಕೂ ವ್ಯತ್ಯಾಸವಿದೆ. `ಬೇಡರ ಕಣ್ಣಪ್ಪ' ಪ್ರಸಂಗ ಯಕ್ಷಗಾನಕ್ಕೆ ಹೊಸತಾದರೂ ಅದರ ಪದ್ಯಗಳು ಪೌರಾಣಿಕ ಪ್ರಸಂಗದಂತಿದ್ದವು. ಅದಕ್ಕಾಗಿ ಜನರಿಗೆ ಆ ಪ್ರಸಂಗ ಹಿಡಿಸಿತು. ನಾನು ಬರೆದ `ಭಾಸವತಿ'ಯಲ್ಲಿಯೂ ಕೂಡಾ ಸಿನೆಮಾ ರಾಗದ ಪದ್ಯಗಳು ಇರಲಿಲ್ಲ. ಅದಕ್ಕಾಗಿ ಜನ ಮೆಚ್ಚಿದರು. ಹೊಸ ಪ್ರಸಂಗಗಳು ರಂಗಕ್ಕೆ ಬರಬೇಕು. ಆದರೆ ಅವು ಯಕ್ಷಗಾನದ ಆಯಾಮದಲ್ಲಿಯೇ ಇರಬೇಕು. ಛಂದಸ್ಸು ಬದಲು ಮಾಡಿ ಸಿನೆಮಾ ಧಾಟಿಯಲ್ಲಿ ಹಾಡುಗಳನ್ನು ಹೇಳಿದರೆ ಆಭಾಸವಾಗುವುದು ಗ್ಯಾರಂಟಿ.
ಮ್ಯಾಕ್‌ಬೆತ್‌!
ಷೇಕ್ಸ್‌ಪಿಯರ್‌ನ `ಮ್ಯಾಕ್‌ಬೆತ್‌' ನಾಟಕವನ್ನು ಯಕ್ಷಗಾನಕ್ಕೆ ತರಬೇಕು. ಅದನ್ನು ಯಕ್ಷಗಾನ ಶೈಲಿಯಲ್ಲಿ ಬರೆಯಬೇಕು ಎನ್ನುವ ಕನಸು ನನ್ನದಾಗಿತ್ತು. ಈಗ ಅದು ಸಾಕಾರವಾಗಿದೆ. ಮ್ಯಾಕ್‌ಬೆತ್‌ ನಾಟಕವನ್ನು ಯಕ್ಷಗಾನ ಶೈಲಿಗೆ ಬರೆದಿದ್ದೇನೆ. `ಮೇಘಕೇತ' ಈ ಪ್ರಸಂಗದ ಹೆಸರು. ವಿದೇಶಿ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಬಹಳ ವ್ಯತ್ಯಾಸವಿದೆ. ಅದಕ್ಕಾಗಿ ಈ ನಾಟಕದಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ಅನಿವಾರ್ಯವಾಗಿ ಬದಲಾಯಿಸಿದ್ದೇನೆ. ಇಲ್ಲಿ ಮ್ಯಾಕ್‌ಬೆತ್‌, `ಮೇಘಕೇತ' ಆಗಿದ್ದಾನೆ. `ಲೂಯಿಸಸ್‌'ನ ಹೆಸರು `ಉಲ್ಲಾಸ' ಎಂದು ಮಾಡಿದ್ದೇನೆ. ಇದರ ರಂಗ ಪ್ರಯೋಗ ಇನ್ನೂ ಆಗಿಲ್ಲ. ಪ್ರಯೋಗ ಕಂಡು ಯಶಸ್ವಿಯಾದರೆ ನನ್ನ ಕನಸು ನನಸಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ನಾನು ಕಂಡ ಕನಸು ಹತ್ತರಿಂದ ಹದಿನೈದು ವರ್ಷದ ಮಕ್ಕಳು ಯಕ್ಷಗಾನವನ್ನು ಕಲಿಯಬೇಕು ಎಂದು. ಇಂದು ಹಲವಾರು ಹಳ್ಳಿಗಳಲ್ಲಿ ಮಕ್ಕಳನ್ನು ಸೇರಿಸಿ ಯಕ್ಷಗಾನ ಆಸಕ್ತರು ಮಕ್ಕಳ ಯಕ್ಷಗಾನ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ನಾನು ಎಷ್ಟೋ ಕಡೆ ನಡೆಯುತ್ತಿರುವ ಶಿಬಿರಗಳಿಗೆ ಮಾರ್ಗದರ್ಶಕನಾಗಿದ್ದೇನೆ. ಅವರಿಗೆ ಯಕ್ಷಗಾನವನ್ನು ಕಲಿಸಿಕೊಡಲು ಹೋಗುತ್ತಿದ್ದೇನೆ. ಹೀಗಾಗಿ ಇದು ಬೇಸಿಗೆ ಶಿಬಿರಗಳ ಮೂಲಕ ನನಸಾಗುತ್ತಿದೆ.
ನನ್ನ ಸದ್ಯದ ಕನಸೆಂದರೆ ಬಡಗುತಿಟ್ಟು ಯಕ್ಷಗಾನವೆಂಬುದು ಎಲ್ಲಾ ಕಡೇ ಒಂದೇ ರೀತಿ ಇರಬೇಕು. ಉತ್ತರಕನ್ನಡ, ದಕ್ಷಿಣ ಕನ್ನಡ ಎನ್ನುವ ಯಕ್ಷಗಾನ ಶೈಲಿಗಳು ಹೋಗಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕು. ಆ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿಯ ಜತೆಗೂಡಿ ಯಕ್ಷಗಾನ ಕಲಿಸುವ ಶಿಕ್ಷಕರ ವರ್ಗದವರು ಪ್ರಯತ್ನ ಮಾಡಬೇಕು.
ಶಾಲೆಗಳಲ್ಲಿ ಭರತನಾಟ್ಯ, ಸಂಗೀತ ಪಠ್ಯವಾಗಿರುವಂತೆ ಯಕ್ಷಗಾನ ಯಾಕೆ ಇನ್ನೂ ಪಠ್ಯವಾಗಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಯಾಕೆಂದರೆ, ಮಾತು, ಕುಣಿತ, ಸಂಗೀತ, ವಾದನ, ಕಣ್ಮನ ಸೆಳೆಯುವ ವೇಷಭೂಷಣ ಹೊಂದಿರುವ ಜಗತ್ತಿನ ಏಕೈಕ ಶ್ರೀಮಂತ ಕಲೆ ಇದು. ಇಂತಹ ಕಲೆಯನ್ನು ಪಠ್ಯವಾಗಿ ಮಾಡಬೇಕು. ಯಕ್ಷಗಾನ ಕಲಿಸುವ ಶಿಕ್ಷಕರಿಗೆ ನೌಕರಿಯ ಭದ್ರತೆ ಇರಬೇಕು. ಇಂದು ಯಕ್ಷಗಾನ ಕಲಾವಿದ ಎಂದರೆ ಕಿರಾಣಿ ಅಂಗಡಿಯಲ್ಲೂ ಕೆಲಸ ಇಟ್ಟುಕೊಳ್ಳುವುದಿಲ್ಲ. ಇಂತಹ ಭಾವನೆ ಹೋಗಬೇಕು. ಇದು ನನ್ನ ಕನಸು. ನನಸಾಗಿಸುವ ಪ್ರಯತ್ನದಲ್ಲಿದ್ದೇನೆ.
ಯಕ್ಷಗಾನವೇ ನನ್ನ ಬದುಕು. ನನ್ನ ಕನಸುಗಳು ಯಕ್ಷಗಾನದ್ದೇ. ಬಹಳಷ್ಟು ನನಸಾಗಿವೆ. ಕನಸುಗಳು ಹುಟ್ಟುತ್ತಲೇ ಇದೆ. ಇದು ನಿರಂತರ. ಕನಸು ಸಾಧನೆಗೆ ಸಹಕಾರಿ. ನನಸಾಗಿದ್ದು ಮುಂದಿನ ಕನಸಿಗೆ ಪೂರಕ ಅಲ್ಲವೇ?


ನಿರೂಪಣೆ: ನಾಗರಾಜ ಮತ್ತಿಗಾರ

Followers

FEEDJIT Live Traffic Feed