Tuesday, June 2, 2009

ಶಾಲೆಯಲ್ಲಿ ಯಕ್ಷಗಾನವೂ ಪಠ್ಯವಾಗಬೇಕು


ಹೆಸರು: ಹೊಸ್ತೋಟ ಮಂಜುನಾಥ ಭಾಗವತ
ಪ್ರಸಿದ್ಧ ಯಕ್ಷಋಷಿ, ಗುರು, ಪ್ರಸಂಗಕರ್ತ
ಜನ್ಮ ದಿನಾಂಕ: 15-2- 1940
ತಂದೆ, ತಾಯಿ: ಗಣಪತಿ ಭಟ್ಟ, ಮಹಾದೇವಿ

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹತ್ತಿರದ ಹನುಮಂತಿ ಗ್ರಾಮದ ಹೊಸ್ತೋಟ ಎನ್ನುವ ಸಣ್ಣ ಹಳ್ಳಿಯಲ್ಲಿ ಜನಿಸಿದವನು ನಾನು. ಬಡ ಕುಟುಂಬ ನಮ್ಮದು. ನನ್ನ ಅಪ್ಪನಿಗೆ ನಾವು ಐದು ಮಂದಿ ಮಕ್ಕಳು. ನಾನು ಗಂಡು ಮಕ್ಕಳಲ್ಲಿ ಹಿರಿಯವ.
ನಮ್ಮ ಕುಟುಂಬಕ್ಕೂ ಯಕ್ಷಗಾನಕ್ಕೂ ಸಂಬಂಧ ಯಾವಾಗಲೂ ಇದೆ. ನಮ್ಮ ಮನೆಗೆ ಕಲಾವಿದರು ಬರುವುದು, ಹೋಗುವುದು ರೂಢಿಯಲ್ಲಿತ್ತು. ಹಾಗಾಗಿ ನಾನು ಸಣ್ಣವನಿರುವಾಗಲೇ ಯಕ್ಷಗಾನದ ಬಗ್ಗೆ ಆಸಕ್ತಿ ಇತ್ತು. ಆವಾಗಲಿಂದಲೂ ನಾನು ಕೆರೆಮನೆ ಶಿವರಾಮ ಹೆಗಡೆ ಅವರ ಅಭಿಮಾನಿ. ಯಕ್ಷಗಾನದ ಚಟವನ್ನು ಅಂಟಿಸಿಕೊಂಡ ನಾನು ಶಾಲೆ ಕಲಿತದ್ದು ನಾಲ್ಕನೇ ತರಗತಿಯವರೆಗೆ ಮಾತ್ರ. ನನ್ನ ಮೂವತ್ತನೇ ವರ್ಷದವರೆಗೂ ನಾನು ಹೀಗೆ ಆಗಬೇಕು, ಇದನ್ನೇ ಮಾಡಬೇಕು ಎಂದು ಕನಸು ಕಂಡವನಲ್ಲ. ಒಬ್ಬ ೃಹ್ಮಚಾರಿಯಾಗಿಯೇ ಕಾಲನ ಜೊತೆ ಹೊಂದಿಕೊಳ್ಳುತ್ತೇನೆ ಎಂದು ಊಹಿಸಿಯೂ ಇರಲಿಲ್ಲ.
ಯಕ್ಷಗಾನವನ್ನು ಕಲಿತ ನಾನು ಮೇಳ ಗೀಳ ಸೇರದೆ ಮನೆಯಲ್ಲೇ ಕೆಲಸ ಮಾಡುತ್ತಾ ಇದ್ದೆ. ಮನೆಯಲ್ಲಿ ಮದುವೆಯಾಗು ಎನ್ನುವ ಒತ್ತಾಯವು ಪ್ರಾರಂಭವಾಯಿತು. ಸರಿ, ಮದುವೆಯಾಗೋಣ ಎಂದು ಮನಸ್ಸು ಮಾಡಿದರೆ ಬಂದ ಸಂಬಂಧವೆಲ್ಲ ಮನೆ ಅಳಿಯ ಆಗುವ ಸಂಬಂಧಗಳೇ. ಮೊದಲು ನಾನು ಸ್ವಂತ ಜಮೀನು ಮಾಡಿಕೊಳ್ಳಬೇಕು. ನಂತರ ಮದುವೆಯ ವಿಚಾರ ಎಂಬ ತಿರ್ಮಾನಕ್ಕೆ ಬಂದೆ.
ಬೇಡ್ತಿ ನದಿಯ ಪ್ರದೇಶದಲ್ಲಿ ಪಡಬಿದ್ದ ಜಮೀನನ್ನು ಸರಿ ಮಾಡಿ, ಅಡಿಕೆ ತೋಟ ಮಾಡಿದೆ. ಇನ್ನೇನು ಫಸಲು ಬರುತ್ತದೆ ಎನ್ನುವಾಗ, ಬೇಡ್ತಿ ನದಿಗೆ ಅಣೆಕಟ್ಟು ಕಟ್ಟುತ್ತಾರೆ ಎನ್ನುವ ಗುಲ್ಲು ಬಿತ್ತು. ನಾನು ಮಾಡಿದ ಶ್ರಮವೆಲ್ಲ ವ್ಯರ್ಥವಾಯಿತಲ್ಲ ಎನ್ನುವ ಬೇಸರದಿಂದ ಆ ಜಾಗವನ್ನೇ ಬಿಟ್ಟು ರಾಮಕೃಷ್ಣ ಆಶ್ರಮ ಸೇರಿ ಬಿಟ್ಟೆ. ಇದು ನನ್ನ ಜೀವನದ ಬದಲಾವಣೆಯ ಕಾಲ.
ಇಲ್ಲೊಂದು ಮಜಾ ಇದೆ. ನಾನು ಅಂದು ಮುಳುಗಡೆಯಾಗಬಹುದು ಎಂದು ಯಾವ ಜಮೀನನ್ನು ಬಿಟ್ಟು ಹೊರಟೆನೋ ಆ ಜಮೀನು ಇನ್ನೂ ಮುಳಗಡೆಯಾಗದಿರುವುದು ವಿಶೇಷ.
ಆಶ್ರಮ ಸೇರಿದ ನನಗೆ ಆಧ್ಯಾತ್ಮಿಕ ಒಲವು ಹೆಚ್ಚಾಯಿತು. ನಾನು ಸಣ್ಣವನಿರುವಾಗಿನಿಂದ ಗೀಳು ಹಚ್ಚಿಕೊಂಡಿದ್ದ ಯಕ್ಷಗಾನ ಮತ್ತೆ ಸೆಳೆಯಿತು. ಯಕ್ಷಗಾನವನ್ನೇ ನಾನು ಅಧ್ಯಾತ್ಮವಾಗಿ ತೆಗೆದುಕೊಂಡೆ. ಅದನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಕಾಣತೊಡಗಿದೆ. ಮದುವೆ ಎನ್ನುವ ವಿಚಾರವೇ ನನಗೆ ನೆನಪಿಗೆ ಬರಲಿಲ್ಲ.
ನನ್ನ ಮೂವತ್ತನೇ ವಯಸ್ಸಿಗೆ ಆಶ್ರಮದಿಂದ ಮರಳಿದೆ. ಕೆರೆಮನೆ ಮೇಳದ ಸಂಪರ್ಕಕ್ಕೆ ಬಂದೆ. ಅಲ್ಲಿ ನನ್ನ ಇಷ್ಟದ ಕಲಾವಿದರಾದ ಶಿವರಾಮ ಹೆಗಡೆ ಅವರ ಸಖ್ಯ. ಅವರ ಹತ್ತಿರ ನಾನೊಂದು ದಿನ ಅಂದೆ `ನಿಮ್ಮ ಅಭಿಮಾನಿ, ನಿಮ್ಮ ಪಾತ್ರಗಳು ಖುಷಿಯಾಗುತ್ತದೆ' ಎಂದೆ. ಅದಕ್ಕೆ ಅವರು, `ತಮಾ, ಕಲಾವಿದನನ್ನು ಮೆಚ್ಚುವುದಕ್ಕಿಂತ, ಅವನನ್ನು ದೊಡ್ಡ ಮಾಡುವುದಕ್ಕಿಂತ ಕಲೆಯನ್ನು ಮೆಚ್ಚ ಬೇಕು. ಕಲಾವಿದನಿಗಿಂತ ಕಲೆ ದೊಡ್ಡದು' ಎಂದರು.
ನಾನು ಅಂದಿನಿಂದ ಯಕ್ಷಗಾನದ ಪ್ರತಿಯೊಂದು ಅಂಗವನ್ನು ಕಲಿಯುವ ಹಟ ತೊಟ್ಟೆ. ನನ್ನ ಜೀವನ ಎನಿದ್ದರೂ ಯಕ್ಷಗಾನ ಎನ್ನುವ ದೃಢ ನಿರ್ಧಾರಕ್ಕೆ ಬಂದೆ. ಯಕ್ಷಗಾನ ಕುಣಿತ ಕಲಿತೆ, ಕುಣಿದೆ. ನೃತ್ಯವನ್ನು ಕಲಿತವನಿಗೆ ಭಾಗವತಿಕೆ ಬಂದರೆ ಒಳ್ಳಯದಲ್ಲವೇ ಎಂದು ಅದನ್ನೂ ಕಲಿತೆ. ಇವೆರಡನ್ನೂ ಕಲಿತ ನನಗೆ ಮದ್ದಲೆ ಮತ್ತು ಚಂಡೆ ವಾದನವನ್ನು ಕಲಿತರೆ ಒಳ್ಳೆಯದು ಅನಿಸಿತು. ಕಲಿತೆ. ನಂತರ ಕೆರೆಮನೆ ಮೇಳದಲ್ಲಿ ಕಲಾವಿದನಾಗಿ ಪಾತ್ರಗಳನ್ನು ನಿರ್ವಹಿಸತೊಡಗಿದೆ.
ಕಲಾವಿದನಾಗಿದ್ದ ನನಗೆ ಯಕ್ಷಗಾನ ಕಲಿಯುವವರಿಗೆ ಏನಾದರೂ ಸುಲಭ ವಿಧಾನವನ್ನು ಅಳವಡಿಸಬೇಕು. ಅದು ಗಣಿತ ರೂಪದಲ್ಲಿರಬೇಕು. ಸುಲಭ ಮತ್ತು ಒಮ್ಮೆ ಕಲಿತರೆ ಮರೆಯದಂತಿರಬೇಕು ಎಂಬ ಸೂತ್ರ ಅಳವಡಿಸುವ ಕನಸನ್ನು ಕಂಡೆ. ಅದರ ಬಗ್ಗೆ ಅಧ್ಯಯನ ಮಾಡಿದೆ. ಬಾಳೆಹದ್ದ ಕೃಷ್ಣ ಭಾಗವತರು ಅದಕ್ಕೆ ಸಹಕಾರಿಯಾದರು. ಅಲ್ಲಿಂದ ನಾನು ನನ್ನ ಹತ್ತಿರ ಕಲಿಯಲು ಬಂದ ವಿದ್ಯಾರ್ಥಿಗಳಿಗೆ ಗಣಿತ ಸೂತ್ರದಲ್ಲಿಯೇ ಯಕ್ಷಗಾನವನ್ನು ಹೇಳಿ ಕೊಡತೊಡಗಿದೆ. ಈ ಗಣಿತ ಸೂತ್ರದಲ್ಲಿ ಯಕ್ಷಗಾನವನ್ನು ಸರಿಯಾಗಿ ಕಲಿತರೆ ಮತ್ತೆ ಮರೆಯುವ ಸಂಭವವಿರುವುದಿಲ್ಲ ಎನ್ನುವುದು ಗಮನಕ್ಕೆ ಬಂತು. ಲಯ ತಪ್ಪುವ ಸಂಭವವೂ ಇಲ್ಲಿರುವುದಿಲ್ಲ. ಇಂದು ನನ್ನ ಅನೇಕ ಶಿಷ್ಯರು ಅದೇ ವಿಧಾನದಲ್ಲಿ ಯಕ್ಷಗಾನವನ್ನು ಕಲಿಸಿ ಕೊಡುತ್ತಿರುವುದರಿಂದ ಆ ಕನಸು ನನಸಾಗಿದೆ.
ಯಕ್ಷಗಾನವನ್ನು ಸಾಮನ್ಯರಿಗೆ ಕಲಿಸಿ ಬಿಡಬಹುದು. ಆದರೆ ಅಂಧರಿಗೆ ಕಲಿಸಿ ಅವರ ಹತ್ತಿರ ಒಂದು ಆಖ್ಯಾನವನ್ನು ಆಡಿಸಬೇಕು ಎನ್ನುವ ಕನಸನ್ನು ಕಂಡೆ. ಸರಿ ಶಿವಮೊಗ್ಗದಲ್ಲಿರುವ ಅಂಧರ ಶಾಲೆಗೆ ಹೋಗಿ ಅವರಿಗೆ ಯಕ್ಷಗಾನವನ್ನು ಕಲಿಸಿದೆ. ಅದೊಂದು ಸವಾಲು. ಆದರೆ ನಾನು ಅಂದುಕೊಂಡದ್ದಕ್ಕಿಂತ ಬೇಗನೆ ಅವರು ಯಕ್ಷಗಾನವನ್ನು ಕಲಿತರು. ಅವರು `ಕಂಸವಧೆ' ಯಕ್ಷಗಾನವನ್ನು ಹಲವಾರು ಬಾರಿ ಪ್ರದರ್ಶಿಸಿದರು.
ನಾನು ಸದಾ ಕನಸುಗಾರ ಎನ್ನಬಹುದು. ಆದರೆ ಕನಸು ನನಸಿನ ಗುರಿ ತಲುಪಬೇಕು, ಅಲ್ಲಿಯವರೆಗೆ ನನಗೆ ಸಮಾಧಾನವಿರುವುದಿಲ್ಲ. ಈ ಕನಸಿನ ಫಲವೇ ಇಂದು ನಾನು 160 ಯಕ್ಷಗಾನ ಆಖ್ಯಾನಗಳನ್ನು ರಚಿಸಲು ಕಾರಣವಾಯಿತು. ಇದರಲ್ಲಿ ಸಂಪೂರ್ಣ ರಾಮಾಯಣ, ಸಂಪೂರ್ಣ ಮಹಾಭಾರತ, ಸಂಪೂರ್ಣ ಭಾಗವತ, ಭಾಸವತಿ, ಶ್ರೀರಾಮ ನಿರ್ಯಾಣ ಜೊತೆಗೆ ಮಕ್ಕಳು ಸುಲಭವಾಗಿ ಪ್ರದರ್ಶನ ನೀಡುವಂತಹ ಹಲವಾರು ಯಕ್ಷಗಾನವನ್ನು ಬರೆದಿದ್ದೇನೆ.
ಇಂದು ವೃತ್ತಿ ಮೇಳಗಳು ಪ್ರದರ್ಶಿಸುವ ಯಕ್ಷಗಾನದಲ್ಲಾದ ಬದಲಾವಣೆ ನೋಡಿದರೆ ಭಯವಾಗುತ್ತದೆ. ಹೊಸ ಕಲಾವಿದರಿಗೆ ಪೌರಾಣಿಕ ಪ್ರಸಂಗದಲ್ಲಿ ಪಾತ್ರ ನಿರ್ವಹಿಸಿದರೆ, ಮಾತಾಡಲಿಕ್ಕೆ ಬರದೆ ಬೇಗನೆ ರಂಗದಿಂದ ನಿರ್ಗಮಿಸುವುದನ್ನು ಕಾಣಬಹುದು. ಅಧ್ಯಯನದ ಕೊರತೆ ಇಂದಿನ ಬಹುತೇಕ ಕಲಾವಿದರಿಗೆ ಇದೆ. ಒಂದು ತಿರುಗಾಟ ಮಾಡಿದಾಕ್ಷಣ ತಾನೊಬ್ಬ ಕಲಾವಿದ ಎಂದುಕೊಂಡು ಬಿಡುತ್ತಾನೆ. ಯಕ್ಷಗಾನದ ಮಟ್ಟಿಗೆ ಇದು ಒಳ್ಳೆಯ ಲಕ್ಷಣವಲ್ಲ. ಇದಕ್ಕೆ ಸಾಮಾಜಿಕ ಪ್ರಸಂಗವೇ ಕಾರಣವೇನೋ ಅನ್ನಿಸುತ್ತದೆ. ಹೊಸ ಪ್ರಸಂಗ ಎನ್ನುವುದು ಯಕ್ಷಗಾನಕ್ಕೆ ಹೊಸತಲ್ಲ. ಆದರೆ ಇಂದು ಬರುತ್ತಿರುವ ಹೊಸ ಪ್ರಸಂಗಗಳಿಗೂ ಅಂದು ಬಂದ ಪ್ರಸಂಗಕ್ಕೂ ವ್ಯತ್ಯಾಸವಿದೆ. `ಬೇಡರ ಕಣ್ಣಪ್ಪ' ಪ್ರಸಂಗ ಯಕ್ಷಗಾನಕ್ಕೆ ಹೊಸತಾದರೂ ಅದರ ಪದ್ಯಗಳು ಪೌರಾಣಿಕ ಪ್ರಸಂಗದಂತಿದ್ದವು. ಅದಕ್ಕಾಗಿ ಜನರಿಗೆ ಆ ಪ್ರಸಂಗ ಹಿಡಿಸಿತು. ನಾನು ಬರೆದ `ಭಾಸವತಿ'ಯಲ್ಲಿಯೂ ಕೂಡಾ ಸಿನೆಮಾ ರಾಗದ ಪದ್ಯಗಳು ಇರಲಿಲ್ಲ. ಅದಕ್ಕಾಗಿ ಜನ ಮೆಚ್ಚಿದರು. ಹೊಸ ಪ್ರಸಂಗಗಳು ರಂಗಕ್ಕೆ ಬರಬೇಕು. ಆದರೆ ಅವು ಯಕ್ಷಗಾನದ ಆಯಾಮದಲ್ಲಿಯೇ ಇರಬೇಕು. ಛಂದಸ್ಸು ಬದಲು ಮಾಡಿ ಸಿನೆಮಾ ಧಾಟಿಯಲ್ಲಿ ಹಾಡುಗಳನ್ನು ಹೇಳಿದರೆ ಆಭಾಸವಾಗುವುದು ಗ್ಯಾರಂಟಿ.
ಮ್ಯಾಕ್‌ಬೆತ್‌!
ಷೇಕ್ಸ್‌ಪಿಯರ್‌ನ `ಮ್ಯಾಕ್‌ಬೆತ್‌' ನಾಟಕವನ್ನು ಯಕ್ಷಗಾನಕ್ಕೆ ತರಬೇಕು. ಅದನ್ನು ಯಕ್ಷಗಾನ ಶೈಲಿಯಲ್ಲಿ ಬರೆಯಬೇಕು ಎನ್ನುವ ಕನಸು ನನ್ನದಾಗಿತ್ತು. ಈಗ ಅದು ಸಾಕಾರವಾಗಿದೆ. ಮ್ಯಾಕ್‌ಬೆತ್‌ ನಾಟಕವನ್ನು ಯಕ್ಷಗಾನ ಶೈಲಿಗೆ ಬರೆದಿದ್ದೇನೆ. `ಮೇಘಕೇತ' ಈ ಪ್ರಸಂಗದ ಹೆಸರು. ವಿದೇಶಿ ಸಂಸ್ಕೃತಿಗೂ ನಮ್ಮ ಸಂಸ್ಕೃತಿಗೂ ಬಹಳ ವ್ಯತ್ಯಾಸವಿದೆ. ಅದಕ್ಕಾಗಿ ಈ ನಾಟಕದಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ಅನಿವಾರ್ಯವಾಗಿ ಬದಲಾಯಿಸಿದ್ದೇನೆ. ಇಲ್ಲಿ ಮ್ಯಾಕ್‌ಬೆತ್‌, `ಮೇಘಕೇತ' ಆಗಿದ್ದಾನೆ. `ಲೂಯಿಸಸ್‌'ನ ಹೆಸರು `ಉಲ್ಲಾಸ' ಎಂದು ಮಾಡಿದ್ದೇನೆ. ಇದರ ರಂಗ ಪ್ರಯೋಗ ಇನ್ನೂ ಆಗಿಲ್ಲ. ಪ್ರಯೋಗ ಕಂಡು ಯಶಸ್ವಿಯಾದರೆ ನನ್ನ ಕನಸು ನನಸಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ನಾನು ಕಂಡ ಕನಸು ಹತ್ತರಿಂದ ಹದಿನೈದು ವರ್ಷದ ಮಕ್ಕಳು ಯಕ್ಷಗಾನವನ್ನು ಕಲಿಯಬೇಕು ಎಂದು. ಇಂದು ಹಲವಾರು ಹಳ್ಳಿಗಳಲ್ಲಿ ಮಕ್ಕಳನ್ನು ಸೇರಿಸಿ ಯಕ್ಷಗಾನ ಆಸಕ್ತರು ಮಕ್ಕಳ ಯಕ್ಷಗಾನ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ನಾನು ಎಷ್ಟೋ ಕಡೆ ನಡೆಯುತ್ತಿರುವ ಶಿಬಿರಗಳಿಗೆ ಮಾರ್ಗದರ್ಶಕನಾಗಿದ್ದೇನೆ. ಅವರಿಗೆ ಯಕ್ಷಗಾನವನ್ನು ಕಲಿಸಿಕೊಡಲು ಹೋಗುತ್ತಿದ್ದೇನೆ. ಹೀಗಾಗಿ ಇದು ಬೇಸಿಗೆ ಶಿಬಿರಗಳ ಮೂಲಕ ನನಸಾಗುತ್ತಿದೆ.
ನನ್ನ ಸದ್ಯದ ಕನಸೆಂದರೆ ಬಡಗುತಿಟ್ಟು ಯಕ್ಷಗಾನವೆಂಬುದು ಎಲ್ಲಾ ಕಡೇ ಒಂದೇ ರೀತಿ ಇರಬೇಕು. ಉತ್ತರಕನ್ನಡ, ದಕ್ಷಿಣ ಕನ್ನಡ ಎನ್ನುವ ಯಕ್ಷಗಾನ ಶೈಲಿಗಳು ಹೋಗಬೇಕು. ಪ್ರಾದೇಶಿಕ ಅಸಮತೋಲನ ನಿವಾರಣೆಯಾಗಬೇಕು. ಆ ನಿಟ್ಟಿನಲ್ಲಿ ಯಕ್ಷಗಾನ ಅಕಾಡೆಮಿಯ ಜತೆಗೂಡಿ ಯಕ್ಷಗಾನ ಕಲಿಸುವ ಶಿಕ್ಷಕರ ವರ್ಗದವರು ಪ್ರಯತ್ನ ಮಾಡಬೇಕು.
ಶಾಲೆಗಳಲ್ಲಿ ಭರತನಾಟ್ಯ, ಸಂಗೀತ ಪಠ್ಯವಾಗಿರುವಂತೆ ಯಕ್ಷಗಾನ ಯಾಕೆ ಇನ್ನೂ ಪಠ್ಯವಾಗಲಿಲ್ಲ ಎನ್ನುವುದು ಸೋಜಿಗದ ಸಂಗತಿ. ಯಾಕೆಂದರೆ, ಮಾತು, ಕುಣಿತ, ಸಂಗೀತ, ವಾದನ, ಕಣ್ಮನ ಸೆಳೆಯುವ ವೇಷಭೂಷಣ ಹೊಂದಿರುವ ಜಗತ್ತಿನ ಏಕೈಕ ಶ್ರೀಮಂತ ಕಲೆ ಇದು. ಇಂತಹ ಕಲೆಯನ್ನು ಪಠ್ಯವಾಗಿ ಮಾಡಬೇಕು. ಯಕ್ಷಗಾನ ಕಲಿಸುವ ಶಿಕ್ಷಕರಿಗೆ ನೌಕರಿಯ ಭದ್ರತೆ ಇರಬೇಕು. ಇಂದು ಯಕ್ಷಗಾನ ಕಲಾವಿದ ಎಂದರೆ ಕಿರಾಣಿ ಅಂಗಡಿಯಲ್ಲೂ ಕೆಲಸ ಇಟ್ಟುಕೊಳ್ಳುವುದಿಲ್ಲ. ಇಂತಹ ಭಾವನೆ ಹೋಗಬೇಕು. ಇದು ನನ್ನ ಕನಸು. ನನಸಾಗಿಸುವ ಪ್ರಯತ್ನದಲ್ಲಿದ್ದೇನೆ.
ಯಕ್ಷಗಾನವೇ ನನ್ನ ಬದುಕು. ನನ್ನ ಕನಸುಗಳು ಯಕ್ಷಗಾನದ್ದೇ. ಬಹಳಷ್ಟು ನನಸಾಗಿವೆ. ಕನಸುಗಳು ಹುಟ್ಟುತ್ತಲೇ ಇದೆ. ಇದು ನಿರಂತರ. ಕನಸು ಸಾಧನೆಗೆ ಸಹಕಾರಿ. ನನಸಾಗಿದ್ದು ಮುಂದಿನ ಕನಸಿಗೆ ಪೂರಕ ಅಲ್ಲವೇ?


ನಿರೂಪಣೆ: ನಾಗರಾಜ ಮತ್ತಿಗಾರ

2 comments:

  1. Thanks..a good piece...can be done in detail as book perhaps?

    ReplyDelete
  2. ಭಾಗವತರೇ,
    ೧) ಕನ್ನಡ ಸಾಹಿತ್ಯ ಪರಿಷತ್ತಿನ ಉಪೇಕ್ಷೆಗೆ ಒಳಗಾದ ಯಕ್ಷಗಾನ ಸಾಹಿತ್ಯ, ಕನ್ನಡ ಸಾಹಿತ್ಯದ ಚರಿತ್ರೆಗೆ ಸೇರಬೇಕು.
    ೨) ಹಳೆಯ ಯಕ್ಷಗಾನದ ಕವಿಗಳಿಗೆ ಮನ್ನಣೆ ಪ್ರಚಾರ ದೊರೆಯಬೇಕು.
    ೩) ಯಕ್ಷಸಾಹಿತಿಗಳಿಗೆ ಪ್ರಶಸ್ತಿ ದೊರೆಯಬೇಕು. ಹೊಸ್ತೊಟದವರಿ೦ದಲೇ ಅದು ಯಾಕೆ ಶುರುವಾಗಬಾರದು?
    ೪) ಯಕ್ಷಚರಿತ್ರೆ ಕನ್ನಡ ಚರಿತ್ರೆಯ ಪಠ್ಯಗಳ ಭಾಗವಾಗಬೇಕು.
    ೫) ಕೇ೦ದ್ರ ನಾಟಕ ಮತ್ತು ನೃತ್ಯ ಪರಿಷತ್ತಿನಿ೦ದ ಶಾಸ್ತ್ರೀಯ ಕಲೆಯೆ೦ದು ಗುರುತಿಸಲ್ಪಟ್ಟು, ಸರ್ಕಾರದ ಸಹಾಯ ಧನ ದೊರೆಯಬೇಕು.
    ೬) ಹೊಸ್ತೋಟರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕು.
    ೭) ಯಕ್ಷ ಪರಿಷತ್ತಿಗೆ ಸ೦ಶೋಧನಾ ಸಹಾಯ ಧನ ದೊರೆಯ ಬೇಕು.
    ೭) ಶಾಸ್ತ್ರೀಯವಾಗಿ ಸ್ವರಜ್ನಾನಯುತವಾದ ಭಾಗವತಿಕೆ ಶಿಕ್ಷಣ ವ್ಯವಸ್ಠೆಯಾಗಬೇಕು.
    ೮) ಇನ್ನೂ ಹಲವಿದೆ ಆದರೆ ಇವು ಬೇಗ ಆಗಬೇಕು.

    ಇದು ಯಕ್ಷ ಚಮಕ.

    ReplyDelete

Followers

FEEDJIT Live Traffic Feed